ಕುಂಬ್ಳೆ ಟೋಲ್ಗೇಟ್ ಅವೈಜ್ಞಾನಿಕ.: ಫಾರೂಕ್ ಉಳ್ಳಾಲ್
ಮಂಗಳೂರು:ಕೇರಳ ಗಡಿ ಪ್ರದೇಶವಾದ ತಲಪಾಡಿಯಲ್ಲಿರುವ ‘ಟೋಲ್ಗೇಟ್’ ನಿಂದ ಕೇವಲ ಇಪ್ಪತ್ತೊಂದು ಕಿ.ಮೀ ಅಂತರದಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಸ್ಥಾಪಿಸಿರುವ ‘ಕುಂಬ್ಳೆ ಟೋಲ್ ಗೇಟ್’ ಅವೈಜ್ಞಾನಿಕ ಮತ್ತು ಉದ್ಧಟತನದ ಪರಮಾವಧಿ ಎಂದು ಕರ್ನಾಟಕ ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿ ಸಂಯೋಜಕ ಫಾರೂಕ್ ಉಳ್ಳಾಲ್ ಹೇಳಿದರು.
ಅವರು ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ರವರ ನೇತೃತ್ವದಲ್ಲಿ ‘ಕುಂಬ್ಳೆ ಟೋಲ್ ಗೇಟ್’ ಅನ್ನು ವಿರೋಧಿಸಿ ನಡೆದ ಜನಪರ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
‘ಟೋಲ್ ಗೇಟ್ ‘ ಅನ್ನು ಅರವತ್ತು ಕಿ.ಮೀ.ಅಂತರದಲ್ಲಷ್ಟೇ ರಾಷ್ಟ್ರೀಯ ಹೆದ್ದಾರಿ ಇಲಾಖೆ ಸ್ಥಾಪಿಸಲು ಕೇಂದ್ರ ಸರಕಾರ ಆದೇಶಿಸಿದೆ ಎಂದು ಪದೇ ಪದೇ ಹೇಳಿಕೆ ನೀಡುವ ಸಚಿವ ‘ನಿತಿನ್ ಗಡ್ಕರಿ’ಯ ಮಾತುಗಳು ಯಾಕೆ ಅನುಷ್ಠಾನಗೊಳ್ಳುತ್ತಿಲ್ಲ? ಇದು, ಕೇಂದ್ರ ಸರ್ಕಾರದ ಇಬ್ಬಗೆ ನೀತಿಯೇ? ಸಚಿವ ‘ನಿತಿನ್ ಗಡ್ಕರಿ’ ಜನರ ತಾಳ್ಮೆಯನ್ನು ಪರೀಕ್ಷೀಸುತ್ತಿದ್ದಾರೆಯೇ? ಎಂದು ಪ್ರಶ್ನಿಸಿದ ಫಾರೂಕ್ ಉಳ್ಳಾಲ್, ಈ ಭಾಗದ ಬಹುತೇಕ ಪಕ್ಷ ಮತ್ತು ಸಂಘಟನೆಗಳು ಒಂದಾಗಿ ಎಲ್ಲರಿಗಾಗಿ ನಡೆಸುವ ನ್ಯಾಯೋಚಿತ ಹೋರಾಟದಿಂದ ಕೇಂದ್ರ ಸರ್ಕಾರವನ್ನು ಮುನ್ನಡೆಸುತ್ತಿರುವ ಬಿಜೆಪಿ ಪಕ್ಷದ ಪ್ರತಿನಿಧಿಗಳು ಹೊರಗುಳಿದಿರುವುದು ವಿಷಾದಕರ. ಜನಪರ ನಿಲುವಿಗೆ ಬಲ ಕೊಡುವುದು ರಾಜಕೀಯ ಪಕ್ಷಗಳ ಧ್ಯೇಯವಾಗ ಬೇಕಿದೆ ಎಂದೂ ಶ್ರೀ ಫಾರೂಕ್ ಉಳ್ಳಾಲ್ ಹೇಳಿದರಲ್ಲದೆ, ಸಂಬಂಧಪಟ್ಟ ಇಲಾಖೆ ಮತ್ತು ಕೇಂದ್ರ ಸರಕಾರದ ಪ್ರತಿನಿಧಿಗಳೊಂದಿಗೆ ಕುಂಬ್ಳೆ ಟೋಲ್ ಗೇಟ್ ತೆರವುಗೊಳಿಸಲು ಕಾಸರಗೋಡು ಜಿಲ್ಲೆಯ ಬಿಜೆಪಿ ನೇತಾರರು ಮುಂದಾಗಲಿ ಎಂದು ಆಗ್ರಹಿಸಿದರು.
ಪ್ರತಿಭಟನಾ ನಿರ ಶಾಸಕ ಎ.ಕೆ.ಎಂ, ಅಶ್ರಫ್ ನೇತೃತ್ವದಲ್ಲಿ ವಿವಿಧ ಪಕ್ಷಗಳ ಸ್ಥಳೀಯ ಜನಪ್ರತಿನಿಧಿಗಳು -ನೇತಾರರು ಹಾಗೂ -ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
